ನೀರು ಮತ್ತು ಮಾಹಿತಿ

ಅರ್ಘ್ಯಂ ಸರ್ವೇ - ವರ್ಕ್ ಶಾಪ್

ವಾಟರ್ ಪೋರ್ಟಲ್ಲಿನಲ್ಲಿ ಸಮುದಾಯ ಕಟ್ಟುವ ಕಾರ್ಯದಲ್ಲಿ ತೊಡಗಿಕೊಂಡಿರುವ ನನಗೆ ಅರ್ಘ್ಯಂ ಸಂಸ್ಥೆಯವರ ಒಡನಾಟದಿಂದ ಕಳೆದ ತಿಂಗಳು ತಿಳಿದುಬಂದ ಸಂಗತಿ - ರಾಜ್ಯಾದ್ಯಂತ ಅವರೊಂದು ಸರ್ವೇ ನಡೆಸುತ್ತಿದ್ದಾರೆಂಬುದು. ಕರ್ನಾಟಕದಲ್ಲೇ ಮೊದಲ ಆವೃತ್ತಿ. ಈ ಸರ್ವೇ ಯೋಜನೆಯ ಗುರಿ ಪಂಚಾಯತಿಗಳಡಿ ಹಳ್ಳಿಗಳಿಗೆ ನೀರು ಎಲ್ಲಿಂದ ಸರಬರಾಜಾಗುತ್ತಿದೆ, ಹಾಗೂ ಸರಬರಾಜಾಗಿರುವ ನೀರಿನ ಗುಣಮಟ್ಟ ಎಂಥದ್ದು ಎಂಬುದನ್ನು ಲಾಗ್ ಮಾಡುವುದು.

ಮಾಹಿತಿ ಯುಗ ಇದು; ಯಾವುದೇ ಹೊಸ ಯೋಜನೆ ಇರಲಿ, ಧುಮುಕುವ ಮುನ್ನ ನಮಗೆ ಸಿಗಬಹುದಾದ ಮಾಹಿತಿಯನ್ನೊಮ್ಮೆ ಜಾಲಾಡಿ ನಂತರ ಮುನ್ನಡೆಯುವ ಸಾಹಸಕ್ಕೆ ಕೈಹಾಕುತ್ತೇವೆ. ಅದು ಒಂದು ಕ್ಲಿಕ್ ಮಾಡಿದ ಕೂಡಲೇ ಸರ್ಚ್ ಇಂಜಿನ್ನಿನಲ್ಲಿ ನೇರ ಲಭ್ಯವಾಗುವ ಮಾಹಿತಿಯಿರಬಹುದು, ಅಥವ ಸಂಗ್ರಹಿಸಿದ ಮಾಹಿತಿಯನ್ನಿಟ್ಟುಕೊಂಡು ನಡೆಸಿರುವ ಸಂಶೋಧನೆಯ ಮಾಹಿತಿಯಿರಬಹುದು, ಅಥವ ಲಭ್ಯವಿರುವ ಸಂಶೋಧನಾತ್ಮಕ ಮಾಹಿತಿಯನ್ನು ಒಟ್ಟಿಗಿಟ್ಟು ನೋಡಿ, ಅವಲೋಕಿಸಿ ಸಂಗ್ರಹಿಸಿದ ಮಾಹಿತಿಯಿರಬಹುದು. ಒಟ್ಟು ಸರಿಯಾದ ಮಾಹಿತಿಯಿದ್ದರೆ ಒಂದು ಹೆಜ್ಜೆ ಆಗಲೇ ಮುಂದೆ ಹೋದಂತೆ!
ಅಲ್ಲದೆ ಸರಿಯಾದ ಮಾಹಿತಿಯಿಲ್ಲದೆ ಯಾವುದೇ ಯೋಜನೆ ಅನುಷ್ಟಾನಕ್ಕೆ ಬಂದರೂ ಇಲ್ಲವೇ ಅದರ ಸಂಪೂರ್ಣ ಉಪಯೋಗ ಸಿಗದೇ ಹೋಗುತ್ತದೆ ಅಥವ ಎತ್ತ ಹೋಗಬೇಕೆಂಬ ಸ್ಪಷ್ಟವಲ್ಲದ ದಾರಿ ಯೋಜನೆಯ ದಿಕ್ಕು ತಪ್ಪಿಸುತ್ತದೆ.

ಈ ನಿಟ್ಟಿನಲ್ಲಿ ಈ ಸರ್ವೇ ವಿಷಯ ನನಗೆ ತಿಳಿದುಬಂದಾಗ "ಒಳ್ಳೆಯ ಐಡಿಯ" ಎನಿಸಿತು. ಎಂದಿನಂತೆ ವಿಷಯ ಕಿವಿಗೆ ಬಿದ್ದಾಗ ಈ ಸರ್ವೇ ಬಗ್ಗೆ ಮತ್ತಷ್ಟು ತಿಳಿದುಕೊಳ್ಳುವ ಕುತೂಹಲ, ಆಸಕ್ತಿ. ಅಷ್ಟರೊಳಗೇ ಮೊದಲ ಹಂತದ ಕಾರ್ಯಕ್ರಮಕ್ಕೆ ಬಿಡುವಾದರೆ ಬನ್ನಿ ಎಂಬ ಆಹ್ವಾನ ಬಂತು. ಸರ್ವೇ ಬಗ್ಗೆ ತಿಳಿಯುವ ಕುತೂಹಲದ ನಡುವೆ ಇದರ ಬಗ್ಗೆ ಹೆಚ್ಚೇನೂ ಕೇಳಿರದಿದ್ದ ನನಗೆ ಇದು "ಮತ್ತೊಂದು ನೀರಸ ಸರ್ವೇ ಆಗಿರಲಿಕ್ಕೂ ಸಾಕು" ಎಂದು ಸಣ್ಣಗೆ ಹೇಳುತ್ತಿದ್ದ ಮನಸ್ಸು ಅಳುಕು ಹುಟ್ಟಿಸಿರುವಂತೆಯೇ ಕಾರ್ಯಕ್ರಮ ಅಟೆಂಡ್ ಮಾಡಿದೆ.


ಆದರೆ ಕಾರ್ಯಕ್ರಮ ನಡೆಸಿದ ರೀತಿ, ಅದರಲ್ಲಿ ಅವರುಗಳಿಟ್ಟ ಆಸಕ್ತಿ ಸ್ವತಃ ನೋಡಿ ಖುಷಿಯಾಯಿತು! ಯೋಜನೆಯ ಕೊ-ಆರ್ಡಿನೇಟರ್ ಬಿನಾಯಕ್ ಆಸಕ್ತಿಯಿಂದ ಸರ್ವೇಗಾಗಿ ಅವರುಗಳು ನಡೆಸಿರುವ ತಯಾರಿಯನ್ನು ವಿವರಿಸುತ್ತಿದ್ದ ರೀತಿ, ಹೊಸ ಸಾಫ್ಟ್ವೇರ್ ಬರೆದ ತಂತ್ರಜ್ಞ ಅದನ್ನು ಸಂಭ್ರಮದಿಂದ ಜಗತ್ತಿಗೆ ವಿವರಿಸುವಂತಿತ್ತು. ಕಾರ್ಯಕ್ರಮ ನಡೆದ ಆವರಣ ಸರಳವಾಗಿತ್ತಲ್ಲದೆ ಅಂದು ನಡೆದ ಕಾರ್ಯಕ್ರಮದಲ್ಲೂ ಕಂಡುಬಂದ ಸರಳತೆ ಖುಷಿಕೊಟ್ಟಿತು. ಆದರೆ ಬಹಳ ಇಷ್ಟವಾದ ಸಂಗತಿ ಕೊನೆಯಲ್ಲಿ ರೋಹಿಣಿ (ನಿಲೇಕಣಿ) ಮಾತನಾಡಿದ ವಿಷಯಗಳು. ಸರಳವಾದ ಕನ್ನಡದಲ್ಲಿ ಮಾತನಾಡುತ್ತ ಕರ್ನಾಟಕದ ವಿವಿಧ ಭಾಗಗಳಿಂದ ಬಂದಿದ್ದ ಸಂಸ್ಥೆಗಳ ಪ್ರತಿನಿಧಿಗಳಿಗೆ ಸರ್ವೆ ಮುಖ್ಯ ಉದ್ದೇಶ "ಸರಿಯಾದ ಮಾಹಿತಿ ಸಂಗ್ರಹಿಸುವುದು" ಎಂದು ವಿವರಿಸಿ ಹೇಳುತ್ತಿರುವಾಗ ಅವರ ಮಾತಿನಲ್ಲಿ ಅಡಗಿದ್ದ ಕಾಳಜಿ ಮನತಟ್ಟುವಂತಿತ್ತು. ಕೊನೆಯಲ್ಲಿ ಚಪ್ಪಾಳೆ ತಟ್ಟಲು ಹೊರಟವರಿಗೆ ಚಪ್ಪಾಳೆಯೆಲ್ಲ ಬೇಡ ಎಂದದ್ದರಲ್ಲಿದ್ದ ವಿಶಾಲತೆ ಅಲ್ಲಿದ್ದ ಹೆಚ್ಚು ಮಂದಿಗೆ ಅರ್ಥವಾಗಿರಲಿಕ್ಕಿಲ್ಲ. ವಾಪಸ್ ಮನೆಗೆ ಹೊರಟಾಗ ರೋಹಿಣಿಯವರ ಮಾತುಗಳು, ಮಾತನಾಡಿದ ಧಾಟಿ, ಸರಳ ಶೈಲಿ ಆಲೋಚನೆಗೆ ಹತ್ತಿಸಿತ್ತು!

ಈ ಸರ್ವೆ ರಾಜ್ಯದಾದ್ಯಂತ ಇದೇ ತಿಂಗಳ ಮೂರನೇ ವಾರದಿಂದ ಪ್ರಾರಂಭವಾಗಲಿದೆಯಂತೆ. ಬಿನಾಯಕ್ ಹೇಳುವಂತೆ ಇಪ್ಪತ್ತೆಂಟು ಜಿಲ್ಲೆಗಳಲ್ಲಿನ ಹಳ್ಳಿಗಳ ಹದಿನೇಳು ಸಾವಿರಕ್ಕೂ ಹೆಚ್ಚು ಮನೆಗಳನ್ನು ತಲುಪುವ ಪ್ರಯತ್ನ ಇದಾಗಲಿದೆಯಂತೆ. ಈ ಸರ್ವೆ ನಡೆಸಲು ಸ್ಥಳೀಯ ಸ್ವಯಂ ಸೇವಕರ, ಸ್ಥಳೀಯ ಸಮುದಾಯಗಳ ಹಾಗು ಸ್ಥಳೀಯ ಸಂಸ್ಥೆಗಳ ನೆರವು ಪಡೆಯುತ್ತಿರುವುದರಿಂದ ಸರಿಯಾದ ಮಾಹಿತಿ ಒಟ್ಟುಗೂಡಿಸುವಲ್ಲಿ ಒಳ್ಳೆಯ ಪ್ರಯತ್ನವಾಗಬಹುದು ಎಂದು ಬಿನಾಯಕ್ ಹೇಳುತ್ತಿರುವಾಗ ಸರಕಾರದ ಸರ್ವೇಗಳಿಗೆ ಹೋಲಿಸಿದರೆ ಇದು ಬಹಳ ಒಳ್ಳೆ ಪ್ರಯತ್ನ ಅಂತ ನನಗನಿಸಿದ್ದುಂಟು.

ಸರ್ವೆ ಬಗ್ಗೆ ಹೆಚ್ಚಿನ ಮಾಹಿತಿ ಕೆಳಗಿನ ಸಂಪರ್ಕಗಳಲ್ಲಿದೆ:
http://www.indiawaterportal.org/blog/?s=Anatomy+Of+A+Survey
http://www.indiawaterportal.org/blog/wp-content/uploads/2008/12/translat...

ಅರ್ಘ್ಯಂ ಸಂಸ್ಥೆಯವರ ಸರ್ವೇ ಕುರಿತು ಹಿಂದೊಮ್ಮೆ ಕೇಳಿದ್ದೆ. ಮುಂದಿನ ನೀರಿನ ಬೇಡಿಕೆ ಮತ್ತು ನಿರ್ವಹಣೆ ಕುರಿತು ಅದ್ಯಯನ ನಡೆಸಲು ಬಹಳ ಫಲಕಾರಿಯಾಗಲಿದೆ. ಇವೆಲ್ಲವೂ ಸರಿಯೆನಿಸಿದರೂ ಅವರು ಕಲೆ ಹಾಕುತ್ತಿರುವ ಮಾಹಿತಿ ಏನು? ಎಂಬುದು ನನ್ನ ಕುತೂಹಲ ತಾವು ಅವರು ಸಂಗ್ರಹಿಸುತ್ತಿರುವ ಮಾಹಿತಿ ಅಷ್ಟೂ ಹಳ್ಳಿಗಳಲ್ಲಿ ಎನ್ನುವುದಕಿಂತ ಎಷ್ಟು ಸಂಗ್ರಹಿಸುತ್ತಾರೆ ಮತ್ತು ಈವರೆಗೂ ಸಂಗ್ರಹಿಸದ ಮಾಹಿತಿಗಳು ಅದರಲ್ಲಿವೆಯೆ?

ಹರಿಶ್ ಬಾನುಗೊಂದಿ

Post new comment

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.
Image CAPTCHA
Copy the characters (respecting upper/lower case) from the image.